Tuesday 12 April 2011

ಮುದ್ರಾಡಿ ರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿ ಸದಾರಮೆ ನಾಟಕ ಪ್ರದರ್ಶನ

ನಮ ತುಳುವೆರ್ ಕಲಾ ಸಂಘಟನೆ (ರಿ) ನಾಟ್ಕ ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿ ಫೆಬ್ರವರಿ 25,2011 ರಿಂದ ಮಾರ್ಚ್ 05,2011 ರವರೆಗೆ ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿದಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗಿದರಾಷ್ಟ್ರೀಯ ನಾಟಕೋತ್ಸವ ನವರಂಗೋತ್ಸವದಲ್ಲಿಫೆಬ್ರವರಿ 25ರ ಸಂಜೆ ಗಂಟೆ 7.30ಕ್ಕೆ ರಂಗಾಯಣ ಮೈಸೂರು ಇವರಿಂದ ಬೆಳ್ಳಾವೆ ನರಹರಿ ಶಾಸ್ತ್ರಿ ರಚಿಸಿ ವೈ.ಎಮ್ ಪುಟ್ಟಣ್ಣಯ್ಯ ನಿರ್ದೇಶಿಸಿರುವ ಸದಾರಮೆ ಎಂಬ ಕನ್ನಡ ನಾಟಕ ಪ್ರದರ್ಶನಗೊಂಡಿತು.
7 ದಶಕಗಳ ಹಿಂದೆ ಪ್ರಕಟವಾದ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಸದಾರಮೆ ನಾಟಕ ಗುಬ್ಬಿ ವೀರಣ್ಣಯ್ಯ ಮತ್ತು ಹಿರಣ್ಣಯ್ಯ ನಾಟಕ ಮಂಡಳಿಗಳಿಂದ ಒಂದು ಕಾಲಕ್ಕೆ ಕರ್ನಾಟಕ ರಾಜ್ಯದಾದ್ಯಂತ ಜನಪ್ರಿಯವಾದ ನಾಟಕ ಆ ಸಂದರ್ಭಕ್ಕೆ ಬೇಕಾಗಿದ್ದ ಎಲ್ಲಾ ಆಶಯಗಳು ಈ ನಾಟಕದಲ್ಲಿ ಅಡಕವಾಗಿದೆ. ಬಹುತೇಕ ಜನಪದ ಕತೆಗಳಲ್ಲಿ ಕಂಡುಬರುವ ಆಶಯ ಹೆಣ್ಣು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಮತ್ತು ಅದರಿಂದ ಪಾರಾಗುವುದು. ಸಾಮಾನ್ಯವಾಗಿ ಎಲ್ಲಾ ಜನಪದ ಕತೆಗಳ ಹೆಣ್ಣು ಹೆಚ್ಚು ಧಾರಣಶಕ್ತಿಯುಳ್ಳವಳಾಗಿ ಕಾಣಿಸಿಕೊಳ್ಳುತ್ತಾಳೆ. ನಾಟಕದ ಆರಂಭಕ್ಕೆ ಕೊಡ ಹೊತ್ತು ನೃತ್ಯಗೈಯುವ ಹೆಣ್ಣುಮಗಳು ನಾಟಕದ ಅಂತ್ಯದಲ್ಲಿ ಕತ್ತಿ ದಂಡ ಹಿಡಿದವರಲ್ಲದೇ ಕಾಮವಾಂಛಿತ ಪುರುಷರನ್ನೆಲ್ಲಾ ತಳ್ಳಿಹಾಕುತ್ತಾ ಸಿಂಹಾಸನವೇರಿ ಕೂರುವ ಒಂದು ಸಾಂಕೇತಿಕ ನಾಟಕ ಸದಾರಮೆ.
ಆ ಕಾಲದ ನಾಟಕ ಮಂಡಳಿಗಳು ತಮ್ಮ ರಸಿಕವರ್ಗದ ರಂಜನೆಗಾಗಿ ನೀತಿಪಾಠ ಪ್ರದರ್ಶನಕ್ಕಾಗಿ ಈ ನಾಟಕವನ್ನು ಆಯ್ಕೆ ಮಾಡಿಕೊಂಡವು. ಈ ನಾಟಕದ ಪ್ರದರ್ಶನಗಳು ಯಶಸ್ಸನ್ನು ಗಳಿಸಿದ್ದು ಈಗ ಇತಿಹಾಸಕ್ಕೆ ಸೇರಿದ ಮಾತು.ಈ ಬಗೆಯ ಐತಿಹಾಸಿಕ ನೆನಪಿನ ಗುಂಗಿನ ಮೇಲೆ ಇದೀಗ ನಿರ್ದೇಶಕ ವೈ.ಯಂ ಪುಟ್ಟಣ್ಣಯ್ಯ ಸದಾರಮೆಯನ್ನು ಅದ್ಭುತವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ನವೋದಯ ಪೂರ್ವ ನಾಟಕಗಳ ಪುರ್ನನವೀಕರಣದ ಪ್ರಯತ್ನಕ್ಕೆ ನಾಂದಿ ಹಾಡಿದೆ ರಂಗಾಯಣ ಮೈಸೂರು ತಂಡದ ಸದಾರಮೆ.

No comments:

Post a Comment