Monday 26 March 2012

ರಂಗಕರ್ಮಿ ಪ್ರಸನ್ನಗೆ ‘ರಾಷ್ಟ್ರೀಯ ನಾಟಕ ಸಮ್ಮಾನ್’ ಪ್ರಶಸ್ತಿ ಪ್ರದಾನ




ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ (ನಾಟ್ಕ) ಬೆಳ್ಳಿಹಬ್ಬದ ಸವಿನೆನಪಿಗಾಗಿ ಆರಂಭಿಸಿದ ದ್ವಿತೀಯ ವರ್ಷದ ‘ರಾಷ್ಟ್ರೀಯ ನಾಟಕ ಸಮ್ಮಾನ್ ಪ್ರಶಸ್ತಿ’ಯನ್ನು ಈ ಬಾರಿ ಹಿರಿಯ ರಂಗಕರ್ಮಿ ಪ್ರಸನ್ನ ಅವರಿಗೆ ಮುದ್ರಾಡಿ ಬಿ.ವಿ.ಕಾರಂತ ಬಯಲು ರಂಗಮಂದಿರದಲ್ಲಿ ರವಿವಾರ ನೀಡಿ ಗೌರವಿಸಲಾಯಿತು.ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ನೀಡಲಾದ ಈ ಪ್ರಶಸ್ತಿ 25 ಸಾವಿರ ರೂ. ನಗದು, ಶಾಶ್ವತ ಫಲಕವನ್ನು ಒಳಗೊಂಡಿದೆ. ಭಾರತೀಯ ರಂಗ ಪರಂಪರೆಗಳನ್ನು ವಿಶ್ಲೇಷಿಸಿ ರಂಗ ಚಳವಳಿಗೆ ನೀಡಿದ ಕೊಡುಗೆಗಾಗಿ ಪ್ರಸನ್ನ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕಳೆದ ಬಾರಿ ಕನ್ನಡದ ಹಿರಿಯ ರಂಗ ಕಲಾವಿದೆ ಉಮಾಶ್ರೀ ಅವರು ಈ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಸನ್ನ, ಮುದ್ರಾಡಿಯಂಥ ಪುಟ್ಟ ಗ್ರಾಮ ದಿಂದ ದೊರೆತ ದೊಡ್ಡ ಪ್ರಶಸ್ತಿ ಇದಾಗಿದೆ ಎಂದರು. ಉಡುಪಿ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಹಾಗೂ ಸಾಹಿತಿ ಅಂಬಾತನಯ ಮುದ್ರಾಡಿ ಪ್ರಶಸ್ತಿ ಪ್ರದಾನ ಮಾಡಿ, ಪ್ರಸನ್ನ ಅವರ ವ್ಯಕ್ತಿತ್ವ, ಆದರ್ಶಗಳನ್ನು ಬಣ್ಣಿಸಿದರು. ಶಾಸಕ ಎಚ್.ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ನಾಟ್ಕ ಸಂಚಾಲಕ ಧರ್ಮಯೋಗಿ ಮೋಹನ್, ನಾಟ್ಕ ಅಧ್ಯಕ್ಷ ಸುಕುಮಾರ್ ಮೋಹನ್ ಉಪಸ್ಥಿತರಿದ್ದರು.

Monday 19 March 2012

ನಾಟಕಕಾರ ಪ್ರಸನ್ನರಿಗೆ ‘ಮುದ್ರಾಡಿ ನಾಟ್ಕ ಸಂಮಾನ’




 ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯು ಬೆಳ್ಳಿಹಬ್ಬದ ನೆನಪಿನಲ್ಲಿ ಆರಂಭಿಸಿದ ‘ಮುದ್ರಾಡಿ ನಾಟ್ಕ ಸಂಮಾನ’ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಹಿರಿಯ ಚಿಂತಕ, ನಿರ್ದೇಶಕ, ನಾಟಕಕಾರ ಪ್ರಸನ್ನ ರಿಗೆ ನೀಡಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಪ್ರಶಸ್ತಿಯು 25ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಮಾ.25ರಂದು ಸಂಜೆ 4ಗಂಟೆಗೆ ಮುದ್ರಾಡಿಯ ಬಿ.ವಿ.ಕಾಂರತ ಬಯಲು ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಗೋಪಾಲ ಭಂಡಾರಿ ವಹಿಸಲಿರುವರು. ಮುಂಬೈ ಉದ್ಯಮಿ ದಿವಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಧರ್ಮಯೋಗಿ ಮೋಹನ್ ಆಶೀರ್ವದಿಸಲಿದ್ದಾರೆ. ಸಂಮಾನಕ್ಕೆ ಮೊದಲು ‘ಪ್ರಸನ್ನರೊಂದಿಗೆ ಮಾತುಕತೆ’ ರಂಗಸಂವಾದ ನಡೆ ಯಲಿದ್ದು, ಕಾರ್ಯಕ್ರಮದ ನಂತರ ಮಂಗಳೂರು ಸುವರ್ಣ ಪ್ರತಿಷ್ಠಾನದ ಕಲಾವಿದರಿಂದ ಸದಾನಂದ ಸುವರ್ಣ ನಿರ್ದೇಶಿಸಿದ ‘ಉರುಳು’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸುಧೀಂದ್ರ ಮೋಹನ್, ಸಂತೋಷ್ ಶೆಟ್ಟಿ ಹಿರಿಯಡಕ, ಉಮೇಶ್ ಕಲ್ಮಾಡಿ, ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.