Tuesday 20 December 2011

ಫೆ.25ರಿಂದ ಬಹುಭಾಷಾ ನಾಟಕೋತ್ಸವ


ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ 2012ರ ಫೆ.25ರಿಂದ ಮಾ.4ರವರೆಗೆ ಮುದ್ರಾಡಿಯಲ್ಲಿ ಹಮ್ಮಿಕೊಂಡಿರುವ 2ನೆ ರಾಷ್ಟ್ರೀಯ ನವರಂಗೋತ್ಸವದಲ್ಲಿ ಬಹುಭಾಷಾ ನಾಟಕೋತ್ಸವ ಜರಗಲಿದೆ.ಈ ನಾಟಕೋತ್ಸವದಲ್ಲಿ ಮುಂಬೈ, ಬೆಂಗಳೂರು ಹಾಗೂ ಒರಿಸ್ಸಾ ರಾಜ್ಯ ದ ನಾಟಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುಕುಮಾರ್ ಮೋಹನ್ ತಿಳಿಸಿದರು.

ಮುದ್ರಾಡಿಯಲ್ಲಿ ‘ನಾಟ್ಕದೂರು’ ನಾಮಕರಣ




ಉಡುಪಿ, ಡಿ.20: ಮುದ್ರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಮ ತುಳುವೆರ್ ಕಲಾ ಸಂಘಟನೆ ಇರುವ ಪ್ರದೇಶಕ್ಕೆ ಗ್ರಾಪಂ ಮೂಲಕ ‘ನಾಟ್ಕದೂರು’ ಎಂದು ಹೆಸರಿಡಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುದ್ರಾಡಿಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಈ ನಾಟ್ಕದೂರಿಗೆ ನೆಲ್ಲಿಬೆಟ್ಟು, ಮಾಂತಿಬೆಟ್ಟು, ಉಜೂರು ಪ್ರದೇಶಗಳು ಒಳಗೊಳ್ಳುತ್ತವೆ. ಇಲ್ಲಿ ಸುಮಾರು 50-60 ಕುಟುಂಬಗಳು ವಾಸ ಮಾಡುತ್ತಿವೆ. ನಾಟ್ಕದೂರು ಎಂಬುದಾಗಿ ನಾಮಕರಣಗೊಂಡಿರುವ ರಾಜ್ಯದಲ್ಲೇ ಪ್ರಥಮ ಪ್ರದೇಶ ಇದಾಗಿದೆ ಎಂದು ಹೇಳಿದರು.
ಕಳೆದ 26ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳನ್ನು ಮಾಡುತ್ತ ಬಂದಿರುವ ನಾಟ್ಕ ತಂಡ, ರಂಗ ಸಂವಾದ, ನವರಂಗೋತ್ಸವ, ಮಕ್ಕಳ ನಾಟಕೋತ್ಸವ ಹಾಗೂ ರಾಷ್ಟ್ರೀಯ ನಾಟಕೋತ್ಸವಗಳನ್ನು ಆಯೋಜಿಸುತ್ತಿವೆ ಎಂದ ಅವರು, ಈ ಪ್ರದೇಶಕ್ಕೆ ನಾಟ್ಕದೂರು ಎಂಬುದಾಗಿ ಹೆಸರಿಸಲು ಸಹಕರಿಸಿದ ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಜಿಪಂ ಸದಸ್ಯ ಮಂಜುನಾಥ ಪೂಜಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಬಾಯರಿ ಹಾಗೂ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಸುಧೀಂದ್ರ ಮೋಹನ್, ಸದಸ್ಯ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.