Monday 20 February 2012

ಫೆ.25ರಿಂದ ‘ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ’






ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಎರಡನೇ ವರ್ಷದ ‘ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ’ವನ್ನು ಫೆ.25ರಿಂದ ಮಾ.4ರವರೆಗೆ ಮುದ್ರಾಡಿಯ ದಿವ್ಯಸಾಗರ ಬಯಲು ರಂಗಸ್ಥಳ ದಲ್ಲಿ ಆಯೋಜಿಸಲಾಗಿದೆ.ಫೆ.25ರಂದು ಸಂಜೆ 6.30ಕ್ಕೆ ಸಿನೆಮಾ ನಿರ್ದೇಶಕ ಬಿ.ಸುರೇಶ್ ಉತ್ಸವವನ್ನು ಉದ್ಘಾಟಿಸಲಿರುವರು. ಅಧ್ಯಕ್ಷತೆ ಯನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಅಗ್ರಹಾರ ಕೃಷ್ಣಮೂರ್ತಿ ವಹಿಸಲಿರುವರು. ಮಾ.4ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಗೋಪಾಲ ಭಂಡಾರಿ ವಹಿಸಲಿದ್ದಾರೆ. ಫೆ.26ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5.30ರ ತನಕ ‘ರಂಗ ಪ್ರಯೋಗದ ನೆಲೆಗಳು ಮತ್ತು ಸಾಧ್ಯತೆಗಳು’ ಕುರಿತ ವಿಚಾರ ಸಂಕಿರಣ ನಡೆ ಯಲಿದೆ. ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುವ ಈ ಉತ್ಸವಕ್ಕೆ ಉಚಿತ ಪ್ರವೇಶ. ಹತ್ತಿರ ಊರುಗಳಿಗೆ ತಲುಪಲು ರಾತ್ರಿ ಸಂಚಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.ಫೆ.25ರಂದು ಮುಂಬಯಿಯ ಕರ್ನಾಟಕ ಸಂಘದಿಂದ ‘ಒರಿ ಮಾಸ್ಟ್ರೆನೆ ಕತೆ’ (ತುಳು), 26ರಂದು ಬೆಂಗಳೂರಿನ ಪ್ರಯೋಗ ರಂಗದಿಂದ ‘ಶಿವರಾತ್ರಿ’ (ಕನ್ನಡ), 27ರಂದು ಮುಂಬೈ ಅಭಿನಯ ಮಂಟಪದಿಂದ ‘ಕಾರ್ನಿಕದ ಶನೀಶ್ವರೆ’(ತುಳು), 28ರಂದು ರಂಗಾಯಣ ಮೈಸೂರು ತಂಡದಿಂದ ‘ಏನ್ ಹುಚ್ಚುರೀ ಯಾಕೇ ಹಿಂಗೆ ಆಡ್ತಿರಿ’(ಕನ್ನಡ), ಫೆ.29ರಂದು ‘ಪಾತಾಳ ಭೈರವಿ’(ತೆಲುಗು) ಹಾಗೂ ಮಾ.1ರಂದು ‘ಮಾಯ ಬಜಾರ್’, (ತೆಲುಗು) ಮಾ.2ರಂದು ಮಣಿಪಾಲ ಸಂಗಮ ಕಲಾವಿದೆರ್ ಅವರಿಂದ ‘ಕರ್ಣಭಾರ’(ಕನ್ನಡ), 3ರಂದು ನಮ ತುಳುವೆರ್ ಕಲಾ ಸಂಘಟನೆಯಿಂದ ‘ಪಿಲಿಪತ್ತಿ ಗಡಸ್’(ತುಳು), 4ರಂದು ಕುದ್ರೋಳಿ ಗಣೇಶ್ ಗಣೇಶ್ ತಂಡದಿಂದ ‘ರಂಗ ಜಾದೂ’ ಪ್ರದರ್ಶನ ನಡೆಯಲಿದೆ. ಈ ಎಲ್ಲ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.
60 ಕಲಾವಿದರನ್ನೊಳಗೊಂಡ ಸುರಭಿ ತಂಡ
ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿರುವ ಆಂಧ್ರಪ್ರದೇಶದ ಜನಪ್ರಿಯ ಸುರಭಿ ತಂಡವು ಈ ಉತ್ಸವದಲ್ಲಿ ಎರಡು ವಿನೂತನ ತೆಲುಗು ನಾಟಕಗಳನ್ನು ಪ್ರದರ್ಶಿಸಲಿದೆ.ಈವರೆಗೆ ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಮಾತ್ರ ನಾಟಕ ಪ್ರದರ್ಶನ ಮಾಡಿರುವ 60 ಮಂದಿ ಕಲಾವಿದರನ್ನೊಳಗೊಂಡ ಈ ತಂಡ ಮೊತ್ತ ಮೊದಲ ಬಾರಿ ಎಂಬಂತೆ ಕರಾವಳಿಗೆ ಆಗಮಿಸುತ್ತಿದೆ. ಫೆ.29ರಂದು ‘ಪಾತಾಳ ಭೈರವಿ’ ಹಾಗೂ ಮಾ.1ರಂದು ‘ಮಾಯ ಬಜಾರ್’ ನಾಟಕ ಪ್ರದರ್ಶಿಸಲಿದೆ.

No comments:

Post a Comment