Sunday, 25 September 2011

ತುಳುವೆರ್ ಕಲಾ ಸಂಘಟನೆ (ರಿ) ಯ ೧೧ನೇ ವರ್ಷದ ನವರಂಗೋತ್ಸವ


ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ (ರಿ) ತನ್ನ ೨೬ನೇ ವರ್ಷದ ಸಂಭ್ರಮಾಚರಣೆಯಲ್ಲಿ ಖ್ಯಾತ ರಂಗಚಿಂತಕ ಲಿಂಗದೇವರು ಹಳೆಮನೆಯವರ ಸ್ಮರಣಾರ್ಥ ೧೧ನೇ ವರ್ಷದ ನವರಂಗೋತ್ಸವವನ್ನು ೨೦೧೧ರ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೦೬ರವರೆಗೆ ಪ್ರತಿದಿನ ರಾತ್ರಿ ೭ ಘಂಟೆಗೆ ಬಿ. ವಿ. ಕಾರಂತ ಬಯಲು ರಂಗಸ್ಥಳದಲ್ಲಿ ನಡೆಸಲಿದೆ.
ಖ್ಯಾತ ಕಿರುತೆರೆ ಧಾರವಾಹಿಗಳ ನಿರ್ದೇಶಕರಾದ ಶ್ರೀ ವಿನು ಬಳಂಜರವರು ನವರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲ ಭಂಡಾರಿಯವರು ವಹಿಸಲಿದ್ದಾರೆ, ಮುಖ್ಯ ಅಥಿತಿಯಾಗಿ ಬೆಂಗಳೂರಿನ, ಕರ್ನಾಟಕ ರಂಗಪರಿಷತ್ತಿನ ಅಧ್ಯಕ್ಷರಾದ ವಿಟ್ಠಲ ಕೊಪ್ಪದರವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಮಣಿಪಾಲದ ಡಾ|| ಹೆಚ್. ಶಾಂತಾರಾಮ್ ರವರು, ಮುಖ್ಯ ಅಥಿತಿಗಳಾಗಿ ದಿವಾಕರ್.ಎನ್. ಶೆಟ್ಟಿ, ಪ್ರಮೋದ್ ಮಧ್ವರಾಜ್ ಹಾಗು ಡಾ|| ರಾಜಾರಾಮ್ ರವರು ಭಾಗವಹಿಸಲಿದ್ದಾರೆ.

ರಾಜ್ಯದ ಹಲವೆಡೆಗಳಿಂದ ವಿವಿಧ ತಂಡಗಳು ನಿತ್ಯವೂ ತಮ್ಮ ನಾಟಕಗಳನ್ನು ಪ್ರದರ್ಶಿಸಲಿವೆ.

೨೮-೦೯-೨೦೧೧ ರಂದು ಬೆಂಗಳೂರಿನ ಸಂಸ(ರಿ) ತಂಡದವರಿಂದ ಸಿ. ಬಸವಲಿಂಗಯ್ಯ ನವರ ನಿರ್ದೇಶನದ "ಕಾತಾಚಿ ಕಥಾರಂಗ", ೨೯-೦೯-೨೦೧೧ ರಂದು ಧಾರವಾಡದ ರಂಗಪರಿಸರ(ರಿ) ತಂಡದವರಿಂದ ವಿಟ್ಠಲ ಕೊಪ್ಪದರವರ ನಿರ್ದೇಶನದ "ಖರೆ ಖರೆ ಸಂಗ್ಯಾ ಬಾಳ್ಯಾ", ೩೦-೦೯-೨೦೧೧ ರಂದು ಬೆಂಗಳೂರಿನ ವಿಜಯಭಾರತಿ ಕಲಾವೃಂದ(ರಿ)ತಂಡದವರಿಂದ ಸತೀಶ್ ಜೋಶಿ ನಿರ್ದೇಶನದ "ಸಮೀಕ್ಷಾ ಒಂದು ಹೆಣ್ಣು", ೦೧-೧೦-೨೦೧೧ ರಂದು ಬೆಂಗಳೂರಿನ ಪಂಚಮುಖಿ ನಟರ ಸಮೂಹ(ರಿ)ತಂಡದವರಿಂದ  ಮಧುಸೂಧನ್ ಕನೇಕಲ್ ನಿರ್ದೇಶನದ "ಕಾಯೋ - ಕಲ್ಪ", ೦೨-೧೦-೨೦೧೧ ರಂದು ಉಡುಪಿಯ ರಥಬೀದಿ ಗೆಳೆಯರು ಮಕ್ಕಳ ತಂಡದಿಂದ ಶ್ರೀಪಾದ ಭಟ್ ನಿರ್ದೇಶನದ "ಪುಷ್ಪರಾಣಿ", ೦೩-೧೦-೨೦೧೧ ರಂದು ಅನೇಕ(ರಿ) ತಂಡದವರಿಂದ ಸುರೇಶ್ ಆನಗಳ್ಳಿ ನಿರ್ದೇಶನದ "ಅಗ್ನಿಲೋಕ", ೦೪-೧೦-೨೦೧೧ ರಂದು ಕುಂದಾಪುರದ ರಂಗಾಧ್ಯಯನ ಕೇಂದ್ರ(ರಿ) ತಂಡದವರಿಂದ ಕಲ್ಲಪ್ಪ ಪೂಜಾರ ನಿರ್ದೇಶನದ "ಕಾಲಯಾತ್ರೆ", ೦೫-೧೦-೨೦೧೧ ರಂದು ನಾಟ್ಕ ಮುದ್ರಾಡಿ(ರಿ) ತಂಡದವರಿಂದ ಶ್ರೀಮತಿ ಸುಗಂಧಿ ಉಮೇಶ್ ಕಲ್ಮಾಡಿ ನಿರ್ದೇಶನದ "ಕೋರ್ಟ್ ಮಾರ್ಷಲ್" ಹಾಗು ಕೊನೆಯ ದಿನವಾದ ೦೬-೧೦-೨೦೧೧ ರಂದು ಅಜೆಕಾರಿನ ಶ್ರೀ ಮೂಕಾಂಬಿಕ ಯಕ್ಷಕಲಾ ಮಂಡಳಿ(ರಿ) ತಂಡದವರಿಂದ "ಶ್ರೀದೇವಿ ಮಹಾತ್ಮೆ" ಯಕ್ಷಗಾನ ಪ್ರದರ್ಶನ ನಡೆಯಲಿದೆ

ಶ್ರೀ ಕ್ಷೇತ್ರ ಮುದ್ರಾದಿಯಲ್ಲಿ ೪೦ನೇ ವರ್ಷದ ಶರನ್ನವರಾತ್ರಿ ಉತ್ಸವ



ಶ್ರೀ ಕ್ಷೇತ್ರ ಆದಿಶಕ್ತಿ ದೇವಸ್ಥಾನ ಬ್ರಹ್ಮಬೈದರ್ಕಳ ಗರಡಿ ಮುದ್ರಾಡಿಯ ೪೦ನೇ ವರ್ಷದ "ಶರನ್ನವ ರಾತ್ರಿ ಉತ್ಸವ" ದಿನಾಂಕ ೨೭-೦೯-೨೦೧೧ ರಂದು ಏಕಾಹ ಭಜನೆಯ ಮುಖೇನ ಪ್ರಾರಂಭಗೊಂಡು ದಿನಾಂಕ ೦೭-೧೦-೨೦೧೧ ರ ಸೂರ್ಯೋದಯದವರೆಗೆ ಜರುಗಲಿದೆ.

ದಿನಾಂಕ ೨೮-೦೯-೨೦೧೧ ರಿಂದ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ಬೆಳಿಗ್ಗೆ ೬.೧೫ ರಿಂದ "ಮಹಾಚಂಡಿಕಾಯಾಗ" ೯ ದಿನಗಳ ಕಾಲ ನಡೆಯಲಿದೆ,
                        ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

Tuesday, 23 August 2011

"ಪಾಠನಾಟಕ" ತರಬೇತಿ ಶಿಬಿರ





  ಉಡುಪಿ; ಕರ್ನಾಟಕ ನಾಟಕ ಅಕಾಡೆಮಿ, ನಮತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇದರ ಆಶ್ರಯದಲ್ಲಿ ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಕನ್ನಡ ಸಂಘದ ವಿದ್ಯಾರ್ಥಿಗಳಿಗೆ "ಪಾಠನಾಟಕ" ತರಬೇತಿ ಶಿಬಿರವು ಮುದ್ರಾಡಿಯಲ್ಲಿ ನಡೆಯಿತು.
 ಮುದ್ರಾಡಿಯ ನಮತುಳುವೆರ್ ಕಲಾ ಸಂಘಟನೆ ಯ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ಇದೇ ತಿಂಗಳ ಕೊನೇ ವಾರದಲ್ಲಿ ಉಡುಪಿ ಜಿಲ್ಲೆಯಾದ್ಯಂತ "ಶಾಲೆಯತ್ತ ರಂಗಭೂಮಿ-ಉಡುಪಿ ಜಿಲ್ಲಾ ಜಾಥಾ" ಹಮ್ಮಿಕೊಂಡಿದ್ದು ಜಿಲ್ಲೆಯ ಪ್ರೌಢಶಾಲೆಗಳಲ್ಲಿ ನಾಟಕ ಪ್ರದರ್ಶನವನ್ನು ನೀಡಲಿದೆ. ರಂಗಕರ್ಮಿ ಐಕೆ ಬೊಳುವಾರು ರವರು ರಂಗರೂಪಕ್ಕಿಳಿಸಿದ ಎಂಟರಿಂದ ಹತ್ತನೇ ತರಗತಿವರೆಗಿನ ಆಯ್ದ ಕನ್ನಡ ಪಾಠ ಹಾಗೂ ಪದ್ಯಗಳನ್ನು ರಂಗಕೃತಿಯಾಗಿಸಿಕೊಂಡು ಪುತ್ತೂರಿನ ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ನಾಟಕವನ್ನು ಸಿದ್ದಪಡಿಸುತ್ತಿದ್ದಾರೆ. ಶಾಲಾ ಸಂಚಾಲಕ ದಿವಾಕರ ಎನ್.ಶೆಟ್ಟಿ, ತಾ.ಪಂ.ಅಧ್ಯಕ್ಷ ಮಂಜುನಾಥ ಪೂಜಾರಿ, ಸಾಹಿತಿ ಅಂಬಾತನಯ ಮುದ್ರಾಡಿ, ಗ್ರಾ.ಪಂ.ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಶಿಕ್ಷಕ ಪಿ.ವಿ.ಆನಂದ್ ಸಾಲಿಗ್ರಾಮ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ನಾಟ್ಕ ಮುದ್ರಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್, ಕಾರ್ಯದರ್ಶಿ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ನಿರ್ದೇಶಕ ಮೌನೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.

Thursday, 4 August 2011

ನಾಟ್ಕಾಸ್ ನಾಟಕೋತ್ಸವ

‘ಕಾರ್ಕಳ, ಆ.4: ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಭವನ ದಲ್ಲಿ ಒಂದು ವಾರ ಕಾಲ ಆಯೋಜಿಸಿದ ನಾಟ್ಕಾಸ್’ ನಾಟಕೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ನಗಾರಿ ಬಾರಿಸುವ ಮೂಲಕ ನಾಟಕೋತ್ಸವವನ್ನು ಉದ್ಘಾಟಿಸಿದ ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ಅಧ್ಯಕ್ಷ ನಿತ್ಯಾನಂದ ಪೈ ಮಾತನಾಡಿ, ಈ ಕಾಲದ ಜನರ ಪ್ರತಿಯೊಂದು ವರ್ತನೆಯೂ ನಾಟಕದಂತೆಯೆ ಭಾಸವಾಗುತ್ತದೆ. ಇಂದಿನವರಿಗೆ ನಾಟಕದಲ್ಲಿ ಆಸಕ್ತಿ ಕಡಿಮೆಯಾಗಲು ಇದೂ ಒಂದು ಕಾರಣವಿರಬಹುದೆಂದು ಅಭಿಪ್ರಾಯಪಟ್ಟರು.



‘‘ಕಾಲೇಜಿನ ಪ್ರಾಧ್ಯಾಪಕ ಡಾ.ಜಯಪ್ರಾಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು. ನಾಟಕೋತ್ಸವದ ಮೊದಲ ದಿನದಂದು ಬೆಂಗಳೂರಿನ ಅನಾವರಣ ತಂಡ, ಡಾ.ರಾಜಪ್ಪದಳವಾಯಿ ವಿರಚಿತ ಒಂದು ಬೊಗಸೆ ನೀರು’ ಎಂಬ ಸಾಮಾಜಿಕ ನಾಟಕ ವನ್ನು ಹು.ದಾ.ಮುತ್ತುರಾಜರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ನಾಟಕೋತ್ಸವದ ಎರಡನೆಯ ದಿನ ಉಡುಪಿಯರಥಬೀದಿ ಗೆಳೆಯರು ಸಾದತ್ ಹುಸೇನ್ ಮಾಂಟೋನ ಮಿಷ್ಟೇಕ್’ ನಾಟಕವನ್ನು ಶ್ರೀಪಾದ್ ಭಟ್‌ರ ನಿರ್ದೇಶನದಲ್ಲಿ ಪ್ರದರ್ಶಿಸಿತು.

Monday, 2 May 2011

ಶ್ರೀಮತಿ ಉಮಾಶ್ರೀಯವರಿಗೆ ಮುದ್ರಾಡಿ ನಾಟ್ಕ ಸಂಮಾನ

 ಮುದ್ರಾಡಿ : ಖ್ಯಾತ ಸಾಂಸ್ಕೃತಿಕ ಸಂಘಟನೆ ನಮತುಳುವೆರ್ ಕಲಾ ಸಂಘಟನೆ (ನಾಟ್ಕ) ಮುದ್ರಾಡಿ ಸಂಸ್ಥೆ, ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಪ್ರಾರಂಭಿಸಿರುವ, ಪ್ರಶಸ್ತಿ ಪತ್ರ, ರೂ 25,000 ನಗದು ಒಳಗೊಂಡ ಮುದ್ರಾಡಿ ನಾಟ್ಕ ಸಂಮಾನ ರಾಷ್ಟ್ರೀಯ ಪ್ರಶಸ್ತಿಯನ್ನು ರಂಗ ಕಲಾವಿದೆ ಶ್ರೀಮತಿ ಉಮಾಶ್ರೀಯವರ ಜೀವಮಾನದ ಂಗಭೂಮಿಯ ಸಾಧನೆಯನ್ನು ಗಮನಿಸಿ ನೀಡಿ ಗೌರವಿಸಲಾಯಿತು
   ಪ್ರಶಸ್ತಿ ಪ್ರದಾನ ಸಮಾರಂಭ ವಿಶ್ಷರಂಗಭೂಮಿ ದಿನ ಮಾರ್ಚ್ 27 ಭಾನುವಾರ ಸಂಜೆ ಗಂಟೆ 7ಕ್ಕೆ ಮುದ್ರಾಡಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ರಂಗಮಂಟಪದಲ್ಲಿ ಜರಗಿದ ಈ ಸಮಾರಂಭದಲ್ಲಿ ನಾಡಿನ ಹಿರಿಯ ರಂಗಚೇತನ ನಾಡೋಜ ಡಾ ಎಣಗಿ ಬಾಳಪ್ಪ ಇವರು ಉಮಾಶ್ರೀಯವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು ಅತಿಥಿಗಳಾಗಿ ಖ್ಯಾತ ಸಂಗೀತಜ್ಞ ಈ ಬಾರಿಯ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಶ್ರೀ ಗುರುರಾಜ್ ಮಾರ್ಪಳ್ಳಿ ಆಗಮಿಸಿದ್ದರು. ಸಮಾರಂಭ ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ಎಚ್ ಗೋಪಾಲ್ ಭಂಡಾರಿ ವಹಿಸಿದ್ದರು. ಸಮಾರಂಭದ ನಂತರ ನಾಟ್ಕ (ರಿ) ಕಲಾವಿದರಿಂದ ಅಸುದ್ದೋ (ಮೂಲ ಕಥೆ: ಪ್ರಭಾಕರ್ ಶಿಶಿಲ, ರಂಗರೂಪ: ಸುಕುಮಾರ್ ಮೋಹನ್, ನಿರ್ದೇಶನ: ಸುಧೀಂದ್ರ ಮೋಹನ್) ತುಳು ನಾಟಕ ಪ್ರದರ್ಶನ ಜರಗಿತು.
   ಮುದ್ರಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜರಗಿದ ಈ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಗ್ರಾಮೀಣ ನಾಟಕ ಸಂಘಟನೆಯ ರಾಷ್ಟ್ರೀಯ ಪ್ರಶಸ್ತಿ ಎರಡೂ ಕೂಡಾ ರಂಗಭೂಮಿಯ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ. ಸಮಾರಂಭದ ಯಶಸ್ಸಿಗೆ ಕಾರಣರಾದ ಮುದ್ರಾಡಿ ನಾಗರಿಕರಿಗೆ ನಾಟ್ಕ ಅಧ್ಯಕ್ಷ ಶ್ರೀ ಸುಕುಮಾರ್ ಮೋಹನ್ ಕೃತಜ್ಞ ತೆ ತಿಳಿಸಿದ್ದಾರೆ.

Friday, 22 April 2011

ಮುದ್ರಾಡಿ ಸುಕುಮಾರ್ ಮೋಹನ್ ರವರಿಗೆ ಯು.ಎ.ಇ. ಯಲ್ಲಿ ಸನ್ಮಾನ "ತೌಳವ ಕಲಾ ತಿಲಕ" ಬಿರುದು ನೀಡಿ ಗೌರವ ಸಮರ್ಪಣೆ

 ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ನಮತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ನೇ ತಾರೀಕಿನವರೆಗೆ ನಡೆದ ರಾಷ್ಟ್ರೀಯ ಮಟ್ಟದ ನಾಟಕೋತ್ಸವ " ರಂಗೋತ್ಸವ 2011" ಯಶಸ್ವಿಯಾಗಿ ನಡೆದು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಶ್ರಿ ಸುಕುಮಾರ್ ಮೋಹನ್ ರವರು ಕಳೆದ 25 ವರ್ಷಗಳಿಂದ ಕನ್ನಡ ತುಳು ಭಾಷೆ ಕಲೆ ಸಂಸ್ಕೃತಿಯನ್ನು ನಾಡಿನಾದ್ಯಂತ ನಾಟಕಗಳ ಮೂಲಕ ಜನ ಜಾಗೃತಿಯನ್ನು ಮೂಡಿಸಿದ ಸಾಧನೆಯನ್ನು ಮೆಚ್ಚಿ ಮಾರ್ಚ್ 21ನೇ ತಾರೀಕು ಸೋಮವಾರ ರಾತ್ರಿ 8.00 ಗಂಟೆಗೆ ಅಬುಧಾಬಿಯ ಹಮ್ದಾನ್ ಸ್ಟ್ರೀಟ್, ಅರಬ್ ಉಡುಪಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ತ ಕಲಾಭಿಮಾನಿಗಳ ಪರವಾಗಿ ಅರಬ್ ಉಡುಪಿ ರೆಸ್ಟೊರೆಂಟ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೇಖರ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಕುಶಾಲ ಶೇಕರ್ ಶೆಟ್ಟಿಯವರು, ಸುಕುಮಾರ್ ಮೋಹನ್ ರವರನ್ನು ಅಭಿನಂದಿಸುತ್ತಾ ಶಾಲು ಹೊದಿಸಿ ಫಲ ಪುಷ್ಪವನ್ನು, ಸ್ಮರಣಿಕೆಯೊಂದಿಗೆ "ತೌಳವ ಕಲಾ ತಿಲಕ" ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಶ್ರೀ ಸುಕುಮಾರ್ ಮೋಹನ್ ರವರು ಯು.ಎ.ಇ. ಯ ಕಲಾಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಕಾರ್ಕಳದ ಮುದ್ರಾಡಿಯಂತ ಕುಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಲಾ ಕಾರ್ಯಕ್ರಮಕ್ಕೆ ಅರಬ್ ಸಂಯುಕ್ತ ಸಂಸ್ಥಾನದ ಸಹೃದಯಿ ಕಲಾ ಪೋಷಕರು ಬೆಂಬಲ ನೀಡಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುಧಾರರಾಗಿದ್ದಾರೆ ಎಂದು ಹೇಳಿ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಪರವಾಗಿ ಯು.ಎ.ಇ. ಯಲ್ಲಿರುವ ಕಲಾ ಪೋಷಕರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿ ತಮ್ಮ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಾಟಕೋತ್ಸವದ ಪೂರ್ಣ ಲೇಖನವನ್ನು ಅಮೂಲ್ಯ ಮಾಹಿತಿಯೊಂದಿಗೆ ಪ್ರಕಟಿಸಿ ವಿಶ್ವದಾದ್ಯಂತ ಮುಟ್ಟಿಸಿದ ಗಲ್ಫ್ ಕನ್ನಡಿಗ ಬಳಗದ ಸೇವೆಯನ್ನು ಸ್ಮರಿಸಿಕೊಂಡು ಕಲಾ ಸೇವೆಗೆ ಮಾಧ್ಯಮಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.



ಬಿ. ಕೆ. ಗಣೇಶ್ ರೈಬ್ ಸಂಯುಕ್ತ ಸಂಸ್ಥಾನ

Saturday, 16 April 2011

ರಂಗಭೂಮಿಯಲ್ಲಿ ತೊಟ್ಟಬಾಣ ಮತ್ತೆ ತೊಡದ ಹೊಸ ಆಶಯ ಮೂಡಲಿ: ಸಿ ಬಸವಲಿಂಗಯ್ಯ

 ಹೆಬ್ರಿ : ರಂಗಭೂಮಿ ಒಂದು ಜಂಗಮ ಕಲೆ.ಆದ್ದರಿಂದ ಅದು ಶಾಸ್ತ್ರಗಳನ್ನು ಮುರಿದು ಹೊಸ ಕಥನವನ್ನು ಕಟ್ಟುತ್ತದೆ. ಅನಾದಿಕಾಲವನ್ನು ವರ್ತಮಾನಕ್ಕೆ ತರುವುದು, ವರ್ತಮಾನವನ್ನು ಪುರಾಣಗೊಳಿಸುವುದು ರಂಗಭೂಮಿಗೆ ಮಾತ್ರ ಸಾಧ್ಯ ಎಂದು ಖ್ಯಾತ ರಂಗನಿರ್ದೇಶಕ ಸಿ ಬಸವಲಿಂಗಯ್ಯ ಹೇಳಿದರು.
ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇದರ ರಜತ ಸಂಭ್ರಮದ ಅಂಗವಾಗಿಭಾನುವಾರಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಆವರಣದಲ್ಲಿ ನಿರ್ಮಿಸಿರುವ ಬಿ.ವಿ ಕಾರಂತ ರಂಗವೇದಿಕೆಯಲ್ಲಿ ಜರಗುತ್ತಿರುವ ರಾಷ್ಟ್ರೀಯ ನಾಟಕೋತ್ಸ

ವದ ಅಂಗವಾಗಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಮಹಾಭಾರತ ಮತ್ತು ಕಾಳಿದಾಸರ ಕಥನ ಪರಂಪರೆ ಇಂದಿಗೂ ಚಲನಶೀಲತೆಯಿಂದ ಪ್ರಸ್ತುತವಾಗಿದೆ. ಈ ಪರಂಪರೆಯಲ್ಲಿಯ ಪ್ರತಿಮೆರೂಪಕಗಳು ಹೊಸ ಆಕೃತಿಗಳಲ್ಲಿ ಕಟ್ಟುವ ಪ್ರಯತ್ನ ರಂಗಭೂಮಿಯಲ್ಲಿ ನಡೆಯಬೇಕಾಗಿದೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ ಕಾಲಪ್ರಜ್ಞೆ ಮತ್ತು ಕಲಾಪ್ರಜ್ಞೆಯಿಂದ ನಾಟಕಗಳು ಪ್ರದರ್ಶಗೊಳ್ಳಬೇಕು. ಪ್ರದರ್ಶನದಲ್ಲೂ ಪ್ರೇಕ್ಷಕರಿಗೆ  ಒಂದು ದರ್ಶನ ಸಾಧ್ಯವಾಗಬೇಕು ಎಂದರು. ರಂಗಕರ್ಮಿ ಡಾ. ನಾಗೇಶ್ ಬೆಟ್ಟಕೋಟೆ ಬೆಂಗಳೂರು ಮತ್ತು ನಾಟ್ಕ ಮುದ್ರಾಡಿಯ ಸಂಚಾಲಕರಾದ ಧರ್ಮಯೋಗಿ ಮೋಹನ್ ಉಪಸ್ಥಿತರಿದ್ದರು. ಪ್ರಸಾದ್ ರಾವ್ ಕಾರ್ಯಕ್ರಮ ನಿರೂಪಿಸಿದರು. ನಾಟ್ಕ ಸಂಘಟನೆಯ ಅಧ್ಯಕ್ಷರಾದ ಸುಕುಮಾರ್ ಮೋಹನ್ ಸ್ವಾಗತಿಸಿದರು. ಸುರೇಂದ್ರ ಮೋಹನ್ ವಂದಿಸಿದರು.  ಬಳಿಕ ನಡೆದ ಸಮಕಾಲೀನ ರಂಗಭೂಮಿಯ ವಸ್ತು ಮತ್ತು ಆಶಯ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಪ್ರೊ ಸುಬ್ರಹ್ಮಣ್ಯಸ್ವಾಮಿ, ಐ ಕೆ ಬೋಳುವಾರು,ಪುತ್ತೂರು ಪ್ರಬಂಧ ಮಂಡಿಸಿದರು.ಗೋಷ್ಠಿಯ ಸಮನ್ವಯಕಾರರಾಗಿ ಪ್ರಸಾದ್ ರಾವ್ ಮಾತನಾಡಿದರು. ಸಂತೋಷ ನಾಯಕ್ ಪಟ್ಲ ನಿರೂಪಿಸಿದರು.