Sunday, 26 February 2012

ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವಕ್ಕೆ ಚಾಲನೆ

mudradi ranga utsava






ತುಳು ರಾಜ್ಯ ಭಾಷೆಯಾಗಲಿ:ಅಗ್ರಹಾರ ಕೃಷ್ಣಮೂರ್ತಿ
ಹೆಬ್ರಿ, ಫೆ.26: ತುಳುನಾಡಿನ ಸಂಸ್ಕೃತಿ, ಭಾಷೆ ವಿಶಿಷ್ಟ ಮತ್ತು ಐತಿಹಾಸಿಕ. ಮೊದಲು ತುಳು ಭಾಷೆಯನ್ನು ರಾಜ್ಯ ಭಾಷೆಯಾನ್ನಾಗಿ ರಾಜ್ಯ ಸರಕಾರ ಅಂಗೀಕಾರ ಪಡೆಯಬೇಕು. ಮುಂದೆ ದೇಶದ 8ನೇ ಪರೀಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಬಲ ಬರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆಯ ಆಶ್ರಯದಲ್ಲಿ ಮುದ್ರಾಡಿ ಯ ದಿವ್ಯಸಾಗರ ಬಯಲು ರಂಗಸ್ಥಳದಲ್ಲಿ ಶನಿವಾರ ಆಯೋಜಿಸಲಾದ ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.ಚೆಂಡೆ ಬಾರಿಸುವ ಮೂಲಕ ಉತ್ಸವವನ್ನು ಉದ್ಘಾಟಿಸಿದ ನಟ, ಸಿನೆಮಾ ನಿರ್ದೇಶಕ ಬಿ.ಸುರೇಶ್ ಮಾತನಾಡಿ, ನಮಗೆ ಬೇಕಾದ ಆನಂದ ನಮಗೆ ನಾವೇ ತಂದುಕೊಂಡು ಸಂತೋಷ ಪಡುವುದು ಬಹುಮುಖ್ಯ. ರಾಜ್ಯ ಸರಕಾರ ರಂಗ ಉತ್ಸವಕ್ಕೆ ಅನುದಾನ ನೀಡಿಲ್ಲ ಎನ್ನುವುದು ಮುಖ್ಯವಲ್ಲ. ಇಷ್ಟು ಜನರ ಪೋತ್ಸಾಹ ದೊರೆತಿರುವುದು ವಿಶೇಷ ಎಂದು ಹೇಳಿದರು.ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಮುಂಬೈ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಬೆಂಗಳೂರಿನ ಪೊಲೀಸ್ ಅಧಿಕಾರಿ ಕಬ್ಬಿನಾಲೆ ಪ್ರಭಾಕರ ಬಾಯರಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ.ಭರತ್ ಕುಮಾರ್ ಪೊಲಿಪುರನ್ನ್ನು ಸನ್ಮಾನಿಸಲಾಯಿತು.ಜಿಪಂ ಸದಸ್ಯ ಮಂಜುನಾಥ ಪೂಜಾರಿ, ನಮತುಳುವೆರ್ ಕಲಾ ಸಂಘಟನೆ ಯ ಅಧ್ಯಕ್ಷ ಸುಕುಮಾರ್ ಮೋಹನ್, ಧರ್ಮಯೋಗಿ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಸುಗಂಧಿ ಮೋಹನ್, ರಂಗಕರ್ಮಿ ಜಗದೀಶ ಜಾಲ, ಜಯ ಪ್ರಕಾಶ ಮಾವಿನಕುಳಿ ಮೊದಲಾದವರು ಉಪಸ್ಥಿತ ರಿದ್ದರು. ಬಳಿಕ ಮುಂಬೈ ಕರ್ನಾಟಕ ಸಂಘದ ಡಾ.ಭರತ್ ಕುಮಾರ್ ಪೊಲಿಪು ನಿರ್ದೇಶನದ ‘ಒರಿ ಮಾಸ್ಟ್ರೆನ ಕತೆ’ ತುಳು ನಾಟಕ ಪ್ರದರ್ಶನಗೊಂಡಿತು.

Monday, 20 February 2012

ಫೆ.25ರಿಂದ ‘ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ’






ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ ಎರಡನೇ ವರ್ಷದ ‘ಮುದ್ರಾಡಿ ರಾಷ್ಟ್ರೀಯ ರಂಗ ಉತ್ಸವ’ವನ್ನು ಫೆ.25ರಿಂದ ಮಾ.4ರವರೆಗೆ ಮುದ್ರಾಡಿಯ ದಿವ್ಯಸಾಗರ ಬಯಲು ರಂಗಸ್ಥಳ ದಲ್ಲಿ ಆಯೋಜಿಸಲಾಗಿದೆ.ಫೆ.25ರಂದು ಸಂಜೆ 6.30ಕ್ಕೆ ಸಿನೆಮಾ ನಿರ್ದೇಶಕ ಬಿ.ಸುರೇಶ್ ಉತ್ಸವವನ್ನು ಉದ್ಘಾಟಿಸಲಿರುವರು. ಅಧ್ಯಕ್ಷತೆ ಯನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಅಗ್ರಹಾರ ಕೃಷ್ಣಮೂರ್ತಿ ವಹಿಸಲಿರುವರು. ಮಾ.4ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಗೋಪಾಲ ಭಂಡಾರಿ ವಹಿಸಲಿದ್ದಾರೆ. ಫೆ.26ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5.30ರ ತನಕ ‘ರಂಗ ಪ್ರಯೋಗದ ನೆಲೆಗಳು ಮತ್ತು ಸಾಧ್ಯತೆಗಳು’ ಕುರಿತ ವಿಚಾರ ಸಂಕಿರಣ ನಡೆ ಯಲಿದೆ. ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುವ ಈ ಉತ್ಸವಕ್ಕೆ ಉಚಿತ ಪ್ರವೇಶ. ಹತ್ತಿರ ಊರುಗಳಿಗೆ ತಲುಪಲು ರಾತ್ರಿ ಸಂಚಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.ಫೆ.25ರಂದು ಮುಂಬಯಿಯ ಕರ್ನಾಟಕ ಸಂಘದಿಂದ ‘ಒರಿ ಮಾಸ್ಟ್ರೆನೆ ಕತೆ’ (ತುಳು), 26ರಂದು ಬೆಂಗಳೂರಿನ ಪ್ರಯೋಗ ರಂಗದಿಂದ ‘ಶಿವರಾತ್ರಿ’ (ಕನ್ನಡ), 27ರಂದು ಮುಂಬೈ ಅಭಿನಯ ಮಂಟಪದಿಂದ ‘ಕಾರ್ನಿಕದ ಶನೀಶ್ವರೆ’(ತುಳು), 28ರಂದು ರಂಗಾಯಣ ಮೈಸೂರು ತಂಡದಿಂದ ‘ಏನ್ ಹುಚ್ಚುರೀ ಯಾಕೇ ಹಿಂಗೆ ಆಡ್ತಿರಿ’(ಕನ್ನಡ), ಫೆ.29ರಂದು ‘ಪಾತಾಳ ಭೈರವಿ’(ತೆಲುಗು) ಹಾಗೂ ಮಾ.1ರಂದು ‘ಮಾಯ ಬಜಾರ್’, (ತೆಲುಗು) ಮಾ.2ರಂದು ಮಣಿಪಾಲ ಸಂಗಮ ಕಲಾವಿದೆರ್ ಅವರಿಂದ ‘ಕರ್ಣಭಾರ’(ಕನ್ನಡ), 3ರಂದು ನಮ ತುಳುವೆರ್ ಕಲಾ ಸಂಘಟನೆಯಿಂದ ‘ಪಿಲಿಪತ್ತಿ ಗಡಸ್’(ತುಳು), 4ರಂದು ಕುದ್ರೋಳಿ ಗಣೇಶ್ ಗಣೇಶ್ ತಂಡದಿಂದ ‘ರಂಗ ಜಾದೂ’ ಪ್ರದರ್ಶನ ನಡೆಯಲಿದೆ. ಈ ಎಲ್ಲ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ.
60 ಕಲಾವಿದರನ್ನೊಳಗೊಂಡ ಸುರಭಿ ತಂಡ
ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿರುವ ಆಂಧ್ರಪ್ರದೇಶದ ಜನಪ್ರಿಯ ಸುರಭಿ ತಂಡವು ಈ ಉತ್ಸವದಲ್ಲಿ ಎರಡು ವಿನೂತನ ತೆಲುಗು ನಾಟಕಗಳನ್ನು ಪ್ರದರ್ಶಿಸಲಿದೆ.ಈವರೆಗೆ ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಮಾತ್ರ ನಾಟಕ ಪ್ರದರ್ಶನ ಮಾಡಿರುವ 60 ಮಂದಿ ಕಲಾವಿದರನ್ನೊಳಗೊಂಡ ಈ ತಂಡ ಮೊತ್ತ ಮೊದಲ ಬಾರಿ ಎಂಬಂತೆ ಕರಾವಳಿಗೆ ಆಗಮಿಸುತ್ತಿದೆ. ಫೆ.29ರಂದು ‘ಪಾತಾಳ ಭೈರವಿ’ ಹಾಗೂ ಮಾ.1ರಂದು ‘ಮಾಯ ಬಜಾರ್’ ನಾಟಕ ಪ್ರದರ್ಶಿಸಲಿದೆ.

Tuesday, 20 December 2011

ಫೆ.25ರಿಂದ ಬಹುಭಾಷಾ ನಾಟಕೋತ್ಸವ


ನಮ ತುಳುವೆರ್ ಕಲಾ ಸಂಘಟನೆಯ ಆಶ್ರಯದಲ್ಲಿ 2012ರ ಫೆ.25ರಿಂದ ಮಾ.4ರವರೆಗೆ ಮುದ್ರಾಡಿಯಲ್ಲಿ ಹಮ್ಮಿಕೊಂಡಿರುವ 2ನೆ ರಾಷ್ಟ್ರೀಯ ನವರಂಗೋತ್ಸವದಲ್ಲಿ ಬಹುಭಾಷಾ ನಾಟಕೋತ್ಸವ ಜರಗಲಿದೆ.ಈ ನಾಟಕೋತ್ಸವದಲ್ಲಿ ಮುಂಬೈ, ಬೆಂಗಳೂರು ಹಾಗೂ ಒರಿಸ್ಸಾ ರಾಜ್ಯ ದ ನಾಟಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುಕುಮಾರ್ ಮೋಹನ್ ತಿಳಿಸಿದರು.

ಮುದ್ರಾಡಿಯಲ್ಲಿ ‘ನಾಟ್ಕದೂರು’ ನಾಮಕರಣ




ಉಡುಪಿ, ಡಿ.20: ಮುದ್ರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಮ ತುಳುವೆರ್ ಕಲಾ ಸಂಘಟನೆ ಇರುವ ಪ್ರದೇಶಕ್ಕೆ ಗ್ರಾಪಂ ಮೂಲಕ ‘ನಾಟ್ಕದೂರು’ ಎಂದು ಹೆಸರಿಡಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುದ್ರಾಡಿಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಈ ನಾಟ್ಕದೂರಿಗೆ ನೆಲ್ಲಿಬೆಟ್ಟು, ಮಾಂತಿಬೆಟ್ಟು, ಉಜೂರು ಪ್ರದೇಶಗಳು ಒಳಗೊಳ್ಳುತ್ತವೆ. ಇಲ್ಲಿ ಸುಮಾರು 50-60 ಕುಟುಂಬಗಳು ವಾಸ ಮಾಡುತ್ತಿವೆ. ನಾಟ್ಕದೂರು ಎಂಬುದಾಗಿ ನಾಮಕರಣಗೊಂಡಿರುವ ರಾಜ್ಯದಲ್ಲೇ ಪ್ರಥಮ ಪ್ರದೇಶ ಇದಾಗಿದೆ ಎಂದು ಹೇಳಿದರು.
ಕಳೆದ 26ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳನ್ನು ಮಾಡುತ್ತ ಬಂದಿರುವ ನಾಟ್ಕ ತಂಡ, ರಂಗ ಸಂವಾದ, ನವರಂಗೋತ್ಸವ, ಮಕ್ಕಳ ನಾಟಕೋತ್ಸವ ಹಾಗೂ ರಾಷ್ಟ್ರೀಯ ನಾಟಕೋತ್ಸವಗಳನ್ನು ಆಯೋಜಿಸುತ್ತಿವೆ ಎಂದ ಅವರು, ಈ ಪ್ರದೇಶಕ್ಕೆ ನಾಟ್ಕದೂರು ಎಂಬುದಾಗಿ ಹೆಸರಿಸಲು ಸಹಕರಿಸಿದ ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಜಿಪಂ ಸದಸ್ಯ ಮಂಜುನಾಥ ಪೂಜಾರಿ, ಮುದ್ರಾಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಬಾಯರಿ ಹಾಗೂ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಸುಧೀಂದ್ರ ಮೋಹನ್, ಸದಸ್ಯ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

Sunday, 25 September 2011

ತುಳುವೆರ್ ಕಲಾ ಸಂಘಟನೆ (ರಿ) ಯ ೧೧ನೇ ವರ್ಷದ ನವರಂಗೋತ್ಸವ


ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ (ರಿ) ತನ್ನ ೨೬ನೇ ವರ್ಷದ ಸಂಭ್ರಮಾಚರಣೆಯಲ್ಲಿ ಖ್ಯಾತ ರಂಗಚಿಂತಕ ಲಿಂಗದೇವರು ಹಳೆಮನೆಯವರ ಸ್ಮರಣಾರ್ಥ ೧೧ನೇ ವರ್ಷದ ನವರಂಗೋತ್ಸವವನ್ನು ೨೦೧೧ರ ಸೆಪ್ಟೆಂಬರ್ ೨೮ರಿಂದ ಅಕ್ಟೋಬರ್ ೦೬ರವರೆಗೆ ಪ್ರತಿದಿನ ರಾತ್ರಿ ೭ ಘಂಟೆಗೆ ಬಿ. ವಿ. ಕಾರಂತ ಬಯಲು ರಂಗಸ್ಥಳದಲ್ಲಿ ನಡೆಸಲಿದೆ.
ಖ್ಯಾತ ಕಿರುತೆರೆ ಧಾರವಾಹಿಗಳ ನಿರ್ದೇಶಕರಾದ ಶ್ರೀ ವಿನು ಬಳಂಜರವರು ನವರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಕಾರ್ಕಳ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲ ಭಂಡಾರಿಯವರು ವಹಿಸಲಿದ್ದಾರೆ, ಮುಖ್ಯ ಅಥಿತಿಯಾಗಿ ಬೆಂಗಳೂರಿನ, ಕರ್ನಾಟಕ ರಂಗಪರಿಷತ್ತಿನ ಅಧ್ಯಕ್ಷರಾದ ವಿಟ್ಠಲ ಕೊಪ್ಪದರವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಮಣಿಪಾಲದ ಡಾ|| ಹೆಚ್. ಶಾಂತಾರಾಮ್ ರವರು, ಮುಖ್ಯ ಅಥಿತಿಗಳಾಗಿ ದಿವಾಕರ್.ಎನ್. ಶೆಟ್ಟಿ, ಪ್ರಮೋದ್ ಮಧ್ವರಾಜ್ ಹಾಗು ಡಾ|| ರಾಜಾರಾಮ್ ರವರು ಭಾಗವಹಿಸಲಿದ್ದಾರೆ.

ರಾಜ್ಯದ ಹಲವೆಡೆಗಳಿಂದ ವಿವಿಧ ತಂಡಗಳು ನಿತ್ಯವೂ ತಮ್ಮ ನಾಟಕಗಳನ್ನು ಪ್ರದರ್ಶಿಸಲಿವೆ.

೨೮-೦೯-೨೦೧೧ ರಂದು ಬೆಂಗಳೂರಿನ ಸಂಸ(ರಿ) ತಂಡದವರಿಂದ ಸಿ. ಬಸವಲಿಂಗಯ್ಯ ನವರ ನಿರ್ದೇಶನದ "ಕಾತಾಚಿ ಕಥಾರಂಗ", ೨೯-೦೯-೨೦೧೧ ರಂದು ಧಾರವಾಡದ ರಂಗಪರಿಸರ(ರಿ) ತಂಡದವರಿಂದ ವಿಟ್ಠಲ ಕೊಪ್ಪದರವರ ನಿರ್ದೇಶನದ "ಖರೆ ಖರೆ ಸಂಗ್ಯಾ ಬಾಳ್ಯಾ", ೩೦-೦೯-೨೦೧೧ ರಂದು ಬೆಂಗಳೂರಿನ ವಿಜಯಭಾರತಿ ಕಲಾವೃಂದ(ರಿ)ತಂಡದವರಿಂದ ಸತೀಶ್ ಜೋಶಿ ನಿರ್ದೇಶನದ "ಸಮೀಕ್ಷಾ ಒಂದು ಹೆಣ್ಣು", ೦೧-೧೦-೨೦೧೧ ರಂದು ಬೆಂಗಳೂರಿನ ಪಂಚಮುಖಿ ನಟರ ಸಮೂಹ(ರಿ)ತಂಡದವರಿಂದ  ಮಧುಸೂಧನ್ ಕನೇಕಲ್ ನಿರ್ದೇಶನದ "ಕಾಯೋ - ಕಲ್ಪ", ೦೨-೧೦-೨೦೧೧ ರಂದು ಉಡುಪಿಯ ರಥಬೀದಿ ಗೆಳೆಯರು ಮಕ್ಕಳ ತಂಡದಿಂದ ಶ್ರೀಪಾದ ಭಟ್ ನಿರ್ದೇಶನದ "ಪುಷ್ಪರಾಣಿ", ೦೩-೧೦-೨೦೧೧ ರಂದು ಅನೇಕ(ರಿ) ತಂಡದವರಿಂದ ಸುರೇಶ್ ಆನಗಳ್ಳಿ ನಿರ್ದೇಶನದ "ಅಗ್ನಿಲೋಕ", ೦೪-೧೦-೨೦೧೧ ರಂದು ಕುಂದಾಪುರದ ರಂಗಾಧ್ಯಯನ ಕೇಂದ್ರ(ರಿ) ತಂಡದವರಿಂದ ಕಲ್ಲಪ್ಪ ಪೂಜಾರ ನಿರ್ದೇಶನದ "ಕಾಲಯಾತ್ರೆ", ೦೫-೧೦-೨೦೧೧ ರಂದು ನಾಟ್ಕ ಮುದ್ರಾಡಿ(ರಿ) ತಂಡದವರಿಂದ ಶ್ರೀಮತಿ ಸುಗಂಧಿ ಉಮೇಶ್ ಕಲ್ಮಾಡಿ ನಿರ್ದೇಶನದ "ಕೋರ್ಟ್ ಮಾರ್ಷಲ್" ಹಾಗು ಕೊನೆಯ ದಿನವಾದ ೦೬-೧೦-೨೦೧೧ ರಂದು ಅಜೆಕಾರಿನ ಶ್ರೀ ಮೂಕಾಂಬಿಕ ಯಕ್ಷಕಲಾ ಮಂಡಳಿ(ರಿ) ತಂಡದವರಿಂದ "ಶ್ರೀದೇವಿ ಮಹಾತ್ಮೆ" ಯಕ್ಷಗಾನ ಪ್ರದರ್ಶನ ನಡೆಯಲಿದೆ

ಶ್ರೀ ಕ್ಷೇತ್ರ ಮುದ್ರಾದಿಯಲ್ಲಿ ೪೦ನೇ ವರ್ಷದ ಶರನ್ನವರಾತ್ರಿ ಉತ್ಸವ



ಶ್ರೀ ಕ್ಷೇತ್ರ ಆದಿಶಕ್ತಿ ದೇವಸ್ಥಾನ ಬ್ರಹ್ಮಬೈದರ್ಕಳ ಗರಡಿ ಮುದ್ರಾಡಿಯ ೪೦ನೇ ವರ್ಷದ "ಶರನ್ನವ ರಾತ್ರಿ ಉತ್ಸವ" ದಿನಾಂಕ ೨೭-೦೯-೨೦೧೧ ರಂದು ಏಕಾಹ ಭಜನೆಯ ಮುಖೇನ ಪ್ರಾರಂಭಗೊಂಡು ದಿನಾಂಕ ೦೭-೧೦-೨೦೧೧ ರ ಸೂರ್ಯೋದಯದವರೆಗೆ ಜರುಗಲಿದೆ.

ದಿನಾಂಕ ೨೮-೦೯-೨೦೧೧ ರಿಂದ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ಬೆಳಿಗ್ಗೆ ೬.೧೫ ರಿಂದ "ಮಹಾಚಂಡಿಕಾಯಾಗ" ೯ ದಿನಗಳ ಕಾಲ ನಡೆಯಲಿದೆ,
                        ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.